ಜ಼ೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೆ ಪ್ರಸಾರ ಆರಂಭಿಸಿರುವ ಧಾರಾವಾಹಿ ಶ್ರೀರಸ್ತು ಶುಭಮಸು. ಪ್ರಸಾರವಾದ ಕೆಲವೇ ಕೆಲವು ಸಂಚಿಕೆಗಳಲ್ಲಿ ಎಲ್ಲ ವರ್ಗದ ನೋಡುಗರನ್ನೂ ತನ್ನತ್ತ ಸೆಳೆದುಕೊಂಡಿದೆ. ಈಗಾಗಲೇ ಧಾರಾವಾಹಿಯ ೭೫ ಕಂತುಗಳು ಪ್ರಸಾರವಾಗಿದ್ದು, ಕತೆಯು ನಾಯಕ-ನಾಯಕಿ ವಿವಾಹದ ಮುಖ್ಯ ಘಟ್ಟವನ್ನು ತಲುಪಿದೆ. ಧಾರಾವಾಹಿಯ ನಾಯಕ ನಾಯಕಿಯರಾದ ಶ್ರೀನಿಧಿ ಹಾಗೂ ಜಾಹ್ನವಿಯ ಈ ವಿವಾಹವನ್ನು ಶ್ರೀರಂಗಪಟ್ಟಣ ಬಳಿಯ ರಮ್ಯ ತಾಣವೊಂದರಲ್ಲಿ ಚಿತ್ರೀಕರಿಸಲಾಗಿದೆ. ಧಾರಾವಾಹಿಯ ಪ್ರಮುಖ ಕಲಾವಿದರೆಲ್ಲ ಈ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಧಾರಾವಾಹಿಯ ನಿರ್ದೇಶಕಿ ಶ್ರುತಿ ನಾಯ್ಡು ಸಾರಥ್ಯದಲ್ಲಿ ಮದುವೆ ಸಂಚಿಕೆ ಮೂಡಿ ಬಂದಿದೆ. ಮುಂಗಾರು ಮಳೆ ಖ್ಯಾತಿಯ ಛಾಯಾಗ್ರಾಹಕ ಕೃಷ್ಣ ಹಾಗೂ ತಂಡದವರು ಮದುವೆ ಸನ್ನಿವೇಶವನ್ನು ಸರೆಹಿಡಿದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕಲಾ ನಿರ್ದೇಶಕ ಶಿವು ಈ ಮದುವೆಗಾಗಿ ವಿಶೇಷ ಸೆಟ್ ನಿರ್ಮಾಣ ಮಾಡಿದ್ದಾರೆ.
ಮಧ್ಯಮವರ್ಗದ ಹುಡುಗಿ ಜಾಹ್ನವಿ, ಶ್ರೀಮಂತ ಮನೆತನದ ಶ್ರೀನಿಧಿಯ ಶ್ರೀಮತಿಯಾಗಿ, ಆರು ಅತ್ತೆಯಂದಿರ ಸೊಸೆಯಾಗುವ ಸಂದರ್ಭ ಇದು. ಮದುವೆಯ ನಾನಾ ಶಾಸ್ತ್ರಗಳ ಜತೆಗೆ, ಮನರಂಜನೆಯನ್ನೂ ಸೇರಿಸಿ ಈ ಎಪಿಸೋಡ್ಗಳನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ ಜ಼ೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಸಿಜು ಪ್ರಭಾಕರನ್ ಮತ್ತು ಪ್ರೊಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರು. ಡಿಸೆಂಬರ್ ೨೯ ರಿಂದ ಜನವರಿ ೩ ವರೆಗೆ ರಾತ್ರಿ ೭ ಕ್ಕೆ ಮದುವೆಯ ವಿಶೇಷ ಸಂಚಿಕೆಗಳು ಪ್ರಸಾರವಾಗಲಿದೆ. ವಿವಾಹ ಮುಹೂರ್ತದ ಒಂದು ಗಂಟೆಯ ವಿಶೇಷ ಸಂಚಿಕೆ ಶ್ರೀರಸ್ತು ಶುಭಮಸ್ತು ಕಲ್ಯಾಣಮಸ್ತು ಜನವರಿ ೪ರ ಭಾನುವಾರ ರಾತ್ರಿ ೮ರಿಂದ ೯ರವರೆಗೆ ಪ್ರಸಾರವಾಗಲಿದೆ.